ನಿವೇಶನಕ್ಕಾಗಿ ಭೂಮಿ ಕಾಯ್ದಿರಿಸಲು ಹಾಗೂ ವಾಸಿಸುತ್ತಿರುವ ಸ್ಥಳಕ್ಕೆ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ತಾಲೂಕಿನ ಹಳೆಮೂಡಿಗೆರೆ ಹಾಗೂ ಗೋಣಿಬೀಡು ಗ್ರಾ.ಪಂ. ವ್ಯಾಪ್ತಿಯ ನಿವೇಶನ ರಹಿತರು ಶುಕ್ರವಾರ ಪಟ್ಟಣದ ತಾ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ವಸತಿಗಾಗಿ ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ.ರುದ್ರಯ್ಯ ಮಾತನಾಡಿ, ಕಳೆದ 8 ವರ್ಷದಿಂದ ನಿವೇಶನಕ್ಕಾಗಿ ನಡೆಸಿದ ಹೋರಾಟದ ಫಲವಾಗಿ ಹಳೆಮೂಡಿಗೆರೆ ಗ್ರಾ.ಪಂ. ವ್ಯಾಪ್ತಿಯ ಸರ್ವೆ ನಂ 7ರಲ್ಲಿ 8 ಎಕರೆ ಸರಕಾರಿ ಭೂಮಿಯಲ್ಲಿ 4 ಎಕರೆ ಭೂಮಿ ನಿವೇಶನಕ್ಕಾಗಿ ಕಾಯ್ದಿರಿಸಲಾಗಿದೆ. ಅಲ್ಲದೇ ಗ್ರಾ.ಪಂ.ಯಿಂದ ಗ್ರಾಮಸಭೆ ಮೂಲಕ ಫಲಾನುಭವಿಗಳ ಪಟ್ಟಿ ಕೂಡ ತಯಾರಾಗಿದೆ. ಹಾಲಿ ವಾಸಲಿರುವ ಸ್ಥಳಕ್ಕೆ ರಸ್ತೆ, ಕುಡಿಯುವ ನೀರು, ಬೀದಿದೀಪ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿಲ್ಲ. ಫಲಾನುಭವಿಗಳ ದಾಖಲಾತಿ ಪರಿಶೀಲಿಸಿ ಸರಕಾರಕ್ಕೆ ವರದಿ ನೀಡದೇ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಇದಕ್ಕೆ ಕಾರಣವೇನೆಂದು ತಾ.ಪಂ. ಇಒ ಲಿಖಿತವಾಗಿ ಉತ್ತರ ನೀಡಬೇಕೆಂದು ಒತ್ತಾಯಿಸಿದರು.
ಟಿಯುಸಿಐ ಜಿಲ್ಲಾಧ್ಯಕ್ಷ ಕೆ.ಕೆ.ಕೃಷ್ಣಪ್ಪ ಮಾತನಾಡಿ, ಗೋಣಿಬೀಡು ವ್ಯಾಪ್ತಿಯ ಕಮ್ಮರಗೋಡು ಗ್ರಾಮದ ಸರ್ವೆ ನಂ 127ರಲ್ಲಿ 2.15 ಎಕರೆ, ಸರ್ವೆ ನಂ126ರಲ್ಲಿ 3 ಎಕರೆ ಸರಕಾರಿ ಭೂಮಿ ಆಶ್ರಯ ನಿವೇಶನಕ್ಕಾಗಿ ಕಾಯ್ದಿರಿಸಲಾಗಿತ್ತು. ಅದರಲ್ಲಿ ಪ್ರಬಾವಿ ವ್ಯಕ್ತಿಯೋರ್ವರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದು, ಅದನ್ನು ಕೂಡಲೇ ತೆರವುಗೊಳಿಸಿ ನಿವೇಶನಕ್ಕಾಗಿ ಕಾಯ್ದಿರಿಸಿ, ಅರ್ಹ ಫಲಾನುಭವಿಗಳಿಗೆ ನೀಡಬೇಕು. ಇನ್ನು ಒಂದು ವಾರದಲ್ಲಿ ನಮ್ಮ ಸಮಸ್ಯೆ ಬಗೆಹರಿಸದಿದ್ದರೆ ಅನಿರ್ಧಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ವಸತಿಗಾಗಿ ಹೋರಾಟ ವೇದಿಕೆ ಅಧ್ಯಕ್ಷೆ ಲಕ್ಷ್ಮೀ, ಕಾರ್ಯದರ್ಶಿ ಶಿವಪ್ಪ, ಮುಖಂಡರಾದ ರವಿ ಮಣ್ಣಿಕೆರೆ, ಗೋಪಿ, ಯಶೋಧ, ಮಂಜುಳ, ನಾಗಮ್ಮ, ರಮ್ಯ, ಗೀತಾ, ಕವಿತಾ ಮತ್ತಿತರರಿದ್ದರು.
.jpg)
No comments:
Post a Comment