ಮೂಡಿಗೆರೆ ತಾಲ್ಲೂಕಿನ
ಗೌಡಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮದ ಹುಡುಗರು ತಂಡ ನವರೂಪ ನೀಡಿದೆ.
ಸರ್ಕಾರಿ ಶಾಲೆ
ಉಳಿಸಿ ಅಭಿಯಾನದ ಅಂಗವಾಗಿ ಗ್ರಾಮದ ಸಮಾನ ಮನಸ್ಕ ಯುವಕರು ಸೇರಿ ರಚಿಸಿಕೊಂಡಿರುವ ಪ್ರವೀಣ್ ಬೈದುವಳ್ಳಿ ನೇತೃತ್ವದ ಗ್ರಾಮದ ಹುಡುಗರು ತಂಡ ಹಾಗೂ ಬೆಂಗಳೂರಿನ ಬಡ್ಡಿ ಬ್ರಹ್ಮಾಂಡ,
ಎಂ.ಜಿ. ಕ್ರಿಯೇಷನ್ಸ್ ಬೈಕ್ ರೈಡರ್ಸ್ ತಂಡದ
ಯುವಕರು ಸೇರಿ ಶಾಲೆಯ ಗೋಡೆಗಳಿಗೆ ಬಣ್ಣ ಬಳಿಯುವುದರ ಜೊತೆಗೆ ಆಕರ್ಷಕ ಚಿತ್ತಾರಗಳನ್ನು ಮೂಡಿಸಿ ಶಾಲೆಗೆ ನವರೂಪ ನೀಡಿದ್ದಾರೆ.
ಕಳೆದ ಬಾರಿ ಇಲ್ಲಿನ ಪ್ರೌಢಶಾಲೆಗೆ ಇದೇ ರೀತಿ ಕಾರ್ಯವನ್ನು ಮಾಡಿದ್ದ ತಂಡ ಈ ಬಾರಿ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಕಟ್ಟಡಗಳ ಗೋಡೆಗಳನ್ನು ವಿಭಿನ್ನ ಚಿತ್ರಗಳಿಂದ ಅಂದಗೊಳಿಸಿದ್ದಾರೆ. ಜೊತೆಗೆ ದಾನಿಗಳ ನೆರವಿನಿಂದ ಶಾಲೆಗೆ ಸಿಸಿ ಕ್ಯಾಮರ ಅಳವಡಿಸಿದ್ದಾರೆ.
ಅಂಗನವಾಡಿ ಮತ್ತು
ಶಾಲೆಯ ಗೋಡೆಗಳ ಮೇಲೆ ಸಾಲುಮರದ ತಿಮ್ಮಕ್ಕ, ಕನ್ನಡ ಮಾತೆ, ರೈತ, ಜಾನಪದ ಕಲೆಗಳು ಸೇರಿದಂತೆ ಹತ್ತಾರು ಚಿತ್ತಾರಗಳನ್ನು ಮೂಡಿಸಿದ್ದಾರೆ. ಈ ಮೂಲಕ ಶಾಲೆಗೆ
ಬರುವ ಮಕ್ಕಳು ಮುದಗೊಳ್ಳುವಂತಹ ವಾತಾವರಣ ಸೃಷ್ಟಿಸಿದ್ದಾರೆ.
ಫೆಬ್ರವರಿ 28 ಮತ್ತು ಮಾರ್ಚ್ 1 ರಂದು ಎರಡು ದಿನಗಳ ಕಾಲ ಗೌಡಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಹತ್ತಾರು ಯುವಕರು, ವಿದ್ಯಾರ್ಥಿಗಳ ಪೋಷಕರು, ಹಳೇವಿದ್ಯಾರ್ಥಿಗಳ ಸಂಘದ ಸದಸ್ಯರು ಮತ್ತು ಬೆಂಗಳೂರಿನಿಂದ ಆಗಮಿಸಿದ್ದ ಯುವಕರ ತಂಡದ ಸದಸ್ಯರು ಸೇರಿ ಶಾಲೆಯ ಅಂದವನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಕೊರತೆಯಿಂದ ಸರ್ಕಾರಿ ಶಾಲೆಗಳು ಎಲ್ಲೆಡೆ ಬಾಗಿಲು ಮುಚ್ಚುತ್ತಿದ್ದು ಗ್ರಾಮೀಣ ಪ್ರದೇಶದ ಮಕ್ಕಳು ಪಟ್ಟಣಗಳ ಕಡೆಗೆ ಮುಖ ಮಾಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಾವೆಲ್ಲಾ ಓದಿರುವ ಸರ್ಕಾರಿ ಶಾಲೆಗಳ ಉಳಿವಿಗೆ ನಮ್ಮ ಕೈಲಾದ ಪ್ರಯತ್ನ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮದ ಹುಡುಗರು ತಂಡ ಇಂತಹ ಪ್ರಯತ್ನದಲ್ಲಿ ತೊಡಗಿದೆ. ಈ ಕಾರ್ಯಕ್ಕೆ ಅನೇಕ ಸಂಘಟನೆಗಳು, ಸ್ಥಳೀಯರು, ದಾನಿಗಳು ಕೈಜೋಡಿಸಿದ್ದಾರೆ. ಇಂತಹ ಕಾರ್ಯ ಎಲ್ಲಾ ಗ್ರಾಮಗಳಲ್ಲಿಯೂ ನಡೆದರೆ ನಮ್ಮ ಸರ್ಕಾರಿ ಶಾಲೆಗಳನ್ನು ಉಳಿಸಬಹುದು.
ಗ್ರಾಮದ ಹುಡುಗರು ತಂಡದ ರುವಾರಿ
* ಪ್ರಕಾಶ್. ಆರ್.
ಪ್ರಭಾರಿ ಮುಖ್ಯಶಿಕ್ಷಕರು, ಸ.ಹಿ.ಪ್ರಾ.ಶಾಲೆ, ಗೌಡಹಳ್ಳಿ





ತುಂಬಾ ಸಂತೋಷ ನಮ್ಮೂರ್ ಹುಡುಗ್ರು
ReplyDelete